ಕಲ್ಕುಡ, ಕಲ್ಲುರ್ಟಿ ದೈವಗಳ ಕಥೆ

ಕಾರ್ಕಳ ತಾಲೂಕಿನಲ್ಲಿ ಶಿಲ್ಪ ಕೆತ್ತನೆ ಕಾಮಕಾರಿಯಲ್ಲಿ ಪ್ರಸಿದ್ದಿ ಪಡೆದಿರುವ “ ವೀರ ಶಂಭು”ಮತ್ತು “ ಇರಾವತಿ ” ಎಂಬ ದಂಪತಿಗಳಿದ್ದರು. ಅವರಿಗೆ ನಾಲ್ಕು ಜನ ಗಂಡು ಮಕ್ಕಳಿದ್ದರು.ಇರಾವತಿ ಏಳು ತಿಂಗಳ ತುಂಬು ಗರ್ಭಿಣಿಯಾಗಿದ್ದಾಗ ವೀರ ಶಂಭುವಿಗೆ ಬೇಲೂರು ಅರಸರಿಂದ ಪದೇ ಪದೇ ಆಹ್ವಾನದ ಓಲೆ ಬರುತ್ತದೆ. ವೀರಶಂಭು ತನ್ನ ಪತ್ನಿ ಗರ್ಭಿಣಿಯಾಗಿರುದರಿಂದ ಅರಮನೆಯ ಓಲೆಗೆ ಒಕ್ಕಣಿಯನ್ನು ನೀಡಲು ಹಿಂಜರಿಯುತ್ತಾನೆ. ಆಗ ಸ್ವತಃ ಅರಸರೇ ಬಂದು ನಮ್ಮ ರಾಜ್ಯದಲ್ಲಿ ಅರಮನೆ ಅಳಿದು ಹೋಗಿದೆ. ಬಸದಿ ನಾಶವಾಗಿ ಹೋಗಿದೆ.ದೇವರಿಗೆ ದೇಗುಲವೂ ಇಲ್ಲ ಇದನ್ನೆಲ್ಲಾ ನಿರ್ಮಿಸಿ ಕೊಡಬೇಕು. ಅರಸರ ನರ್ತಕಿಯರಿಗೆ ನಿವಾಸ, ಓಡುವ ಕುದುರೆ, ಗೊಂಬೆಗಳು, ಆನೆ, ಸಿಂಹಗಳ ಮೂರ್ತಿಯನ್ನು ಕೆತ್ತಿ ಕೊಡಬೇಕು ಎಂದು ಒತ್ತಾಯಿಸುತ್ತಾನೆ. ಅರಸರ ಒತ್ತಾಯದ ಮೇರೆಗೆ ಕುಲದೇವರನ್ನು ಸ್ಮರಿಸಿ, ವೀರ ಶಂಭು ಬೇಲೂರಿಗೆ ಹೊರಡುತ್ತಾನೆ.
ಇತ್ತ ಇರಾವತಿಯು ಅವಳಿ ಮಕ್ಕಳಾದ ಒಂದು ಗಂಡು, ಒಂದು ಹೆಣ್ಣು ಮಗುವಿಗೆ ಜನ್ಮ ನೀಡುತ್ತಾಳೆ. ಗಂಡು ಮಗುವಿಗೆ “ ಶಿಲ್ಪ ಬೀರು” ಹೆಣ್ಣು ಮಗುವಿಗೆ “ಕಾಳಮ್ಮ” ಎಂದು ನಾಮಕರಣ ಮಾಡುತ್ತಾಳೆ. ಇತ್ತ ಶಿಲ್ಪಬೀರು ತನ್ನ ಸಮಕಾಲಿನ ಮಕ್ಕಳೊಂದಿಗೆ ಆಟವಾಡುತ್ತಾ ಇರುವಾಗ ತಂದೆ ಇಲ್ಲದ ಮಗು ಎಂದು ಕುಲದೂಷಣೆ ಮಾಡುತ್ತಾರೆ. ಶಿಲ್ಪಬೀರು ತನ್ನ ತಾಯಿಯ ಬಳಿ ಬಂದು ತನ್ನ ತಂದೆಯ ಬಗ್ಗೆ ವಿಚಾರಿಸುತ್ತಾನೆ. ಆಗ ಇರಾವತಿಯು ಮಗವನ್ನು ಸಮಜಾಯಿಸುತ್ತಾ ಮಗೂ ನೀನು ನನ್ನ ಹೊಟ್ಟೆಯಲ್ಲಿ ಏಳು ತಿಂಗಳಿರುವಾಗಲೇ ನಿನ್ನ ತೀರ್ಥರೂಪರು ಬೇಲೂರಿನ ಅರಸರ ಆಹ್ವಾನದ ಮೇರೆಗೆ ದೇವಸ್ಥಾನಗಳನ್ನು ನಿರ್ಮಿಸಲು ಹೋಗಿರುತ್ತಾರೆ ಎಂದು ತಿಳಿಸುತ್ತಾಳೆ. ಶಿಲ್ಪಬೀರುವು ತಂದೆಯನ್ನು ನೋಡಬೇಕು ನಾನು ಬೇಲೂರಿಗೆ ಹೋಗುತ್ತೇನೆ ಎಂದು ತಾಯಿಯಲ್ಲಿ ಹಠ ಹಿಡಿಯುತ್ತಾನೆ. ಮಗನ ಹಠಕ್ಕೆ ಇರಾವತಿಯಿ ಸೋತು ಶಿಲ್ಪ ಬೀರಿವಿಗೆ ಸಣ್ಣ ಪ್ರಾಯ ದಲ್ಲಿಯೇ ಶಿಲ್ಪ ವಿದ್ಯೆಗಳನ್ನು ಕಲಿಸಿಕೊಡುತ್ತಾಳೆ. ಇತ್ತ ಶಿಲ್ಪ ಬೀರುವು ಅತೀ ಸಣ್ಣ ಪ್ರಾಯದಲ್ಲಿ ಶಿಲ್ಪಶಾಸ್ತ್ರ, ತಂತ್ರಸಾರ ಅನೇಕ ರಹಸ್ಯ ವಿದ್ಯೆಗಳನ್ನು ತಾಯಿಯಿಂದ ಕಲಿತು ಬೇಲೂರಿಗೆ ಹೊರಟೇ ಬಿಡುತ್ತಾನೆ.

ಶಿಲ್ಪಬೀರುವು ಬೇಲೂರಿನಲ್ಲಿ ಗುರುತು ಇಲ್ಲದೆ ತಂದೆಯನ್ನು ಹುಡುಕಲು ಆರಂಭಿಸುತ್ತಾನೆ. ಬೇಲೂರಿನಲ್ಲಿ ದೇವಸ್ಥಾನ ಪ್ರಧಾನ ಮೂರ್ತಿಯ ಕೆತ್ತನೆ ನಡೆಯುತ್ತಾ ಇತ್ತು. ಆಗ ಶಿಲ್ಪ ಬೀರುವು ಅರಸರ ಸಮ್ಮುಖದಲ್ಲಿ ಆ ಮೂರ್ತಿಯಲ್ಲಿರುವ ಲೋಪಗಳನ್ನು ತೋರಿಸಿಕೊಡುತ್ತಾನೆ. ಎಲ್ಲವೂ ಆಶ್ಚರ್ಯವಾಗಲು ಈ ಬಾಲಕನನ್ನು ಅರಸರು ವಿಚಾರಿಸುತ್ತಾರೆ. ಆಗ ಈ ಬಾಲಕ ದೇವಸ್ಥಾನ ನಿರ್ಮಾಣದ ಪ್ರಧಾನ ಶಿಲ್ಪಿಯಾದ “ವೀರ ಶಂಭು”ವಿನ ಮಗನೀತ ಎಂದು ಗೊತ್ತಾಗುತ್ತದೆ.ಅಲ್ಲಿ ತಂದೆ ಮಗ ಒಟ್ಟಾಗುತ್ತಾರೆ.ಮುಂದೆ ತಂದೆ ಮಗ ಸೇರಿ ದೇವಸ್ಥಾನದ ಕೆಲಸವನ್ನು ಮುಗಿಸುತ್ತಾರೆ.ಅರಸರು ಬಹಳ ಸಂತಸದಿಂದ ಉಂಬಳಿ, ಚಿನ್ನದ ಕಡಗ, ಅಪಾರ ಚಿನ್ನ ಬೆಳ್ಳಿಯ ನಾಣ್ಯಗಳನ್ನು ಕೊಟ್ಟು ತಂದೆ ಮಗನನ್ನು ಸನ್ಮಾನಿಸುತ್ತಾರೆ.ತಂದೆ, ಮಗ ಕಾರ್ಕಳಕ್ಕೆ ಹೊರಡಲು ನಿಂತಾಗ ಅರಸರಿಗೆ ಇವರನ್ನು ಕಳುಹಿಸಲು ಇಷ್ಟವಿರಲಿಲ್ಲ. ಅದಕ್ಕೆ ಉಪಾಯವಾಗಿ ಬೆಳಗೊಳದಲ್ಲಿ ಪ್ರಪಂಚದಲ್ಲಿ ಎಲ್ಲೂ ಇಲ್ಲದಂತಹ ಇನ್ನು ಮುಂದೆ ಯಾರು ನಿರ್ಮಾಣ ಮಾಡಬಾರದಂತಹ ಒಂದು ಬೃಹತ್ ಗೋಮ್ಮಟೇಶ್ವರನ ಮೂರ್ತಿಯನ್ನು ಮಾಡಲು ಒತ್ತಾಯಿಸುತ್ತಾರೆ. ಅರಸರ ಒತ್ತಾಯದ ಮೇರೆಗೆ ಬೆಳಗೊಳದಲ್ಲಿ ಮೂರ್ತಿಯ ಕೆಲಸವನ್ನು ಪ್ರಾರಂಭಿಸುತ್ತಾರೆ.

ಇತ್ತ ಶಿಲ್ಪಿಬೀರುವಿನ ತಂಗಿ ಕಾಳಮ್ಮಳಿಗೆ ಅಣ್ಣ ಹಾಗೂ ತಂದೆ ಬೇಲೂರಿಗೆ ಹೋದವರು ಹಿಂತಿರುಗಿ ಬರಲಿಲ್ಲವೆಂದು ದುಃಖಿಸುತ್ತಾ ತಾಯಿ ಇರಾವತಿಯಲ್ಲಿ ನಾನು ಬೇಲೂರಿಗೆ ಅಣ್ಣ ಮತ್ತು ತಂದೆಯನ್ನು ಹುಡುಕಲು ಹೋಗುತ್ತೇನೆ ಎಂದು ಒತ್ತಾಯಿಸುತ್ತಾಳೆ. ತಾಯಿ ಇರಾವತಿಯು ನೀನು ಎಳೆಪ್ರಾಯದ ಹುಡುಗಿ ನಿನ್ನನ್ನು ಒಬ್ಬಳನ್ನೇ ಬೇಲೂರಿಗೆ ಕಳುಹಿಸಲು ಆಗುವುದಿಲ್ಲ ಎಂದು ಹೇಳಲು ಕಾಳಮ್ಮ ದಿನೇ ದಿನೇ ಒತ್ತಾಯಪಡಿಸಲು ಇರಾವತಿ ಕಾಳಮ್ಮಳಿಗೆ ಅನೇಕ ರಹಸ್ಯ ವಿದ್ಯೆಗಳು, ಸ್ಥಂಭನ- ಮಂತ್ರ- ತಂತ್ರ ಹಾಗೂ ಶಿಲ್ಪ ವಿದ್ಯೆಗಳನ್ನು ಕಲಿಸಿಕೊಟ್ಟು ಕುಲದೇವರನ್ನು ಪ್ರಾರ್ಥಿಸಿ ರಕ್ಷಣೆಗೆ ಮಂತ್ರಿಸಿದ ನಾಗರಬೆತ್ತವನ್ನು ಕೊಟ್ಟು ಬೇಲೂರಿಗೆ ಕಳುಹಿಸಿಕೊಡುತ್ತಾಳೆ. ಕಾಳಮ್ಮಳು ಬೇಲೂರಿನಲ್ಲಿ ಅಣ್ಣ ಹಾಗೂ ತಂದೆಯ ಬಗ್ಗೆ ವಿಚಾರಿಸಲು ಅಲ್ಲಿ ತನ್ನ ತಂದೆ ವೀರ ಶಂಭು ಮರಣಹೊಂದಿರುವ ವಿಚಾರ ತಿಳಿಯುತ್ತದೆ. ಹಾಗೂ ಅಣ್ಣ ಬೇಲೂರು ಹಳೆಬೀಡು, ಬೆಳಗೊಳದ ಗೊಮ್ಮಟೇಶ್ವರ ವಿಗ್ರಹವನ್ನು ಪ್ರತಿಷ್ಠಾಪಿಸಿ; ಕಾರ್ಕಳದ ಬೈರವ ಸೂಡವ ಅರಸ ಒತ್ತಾಯದ ಮೇರೆಗೆ ಕಾರ್ಕಳದಲ್ಲಿ ಗೊಮ್ಮಟ್ಟೇಶ್ವರ ವಿಗ್ರಹ ನಿರ್ಮಿಸಲು ತೆರಳಿರುವ ವಿಚಾರ ತಿಳಿಯುತ್ತದೆ.

ಇತ್ತ ಶಿಲ್ಪಬೀರು ಕಾರ್ಕಳದಲ್ಲಿ ಬೃಹತ್ ಏಕಶಿಲಾ ಗೊಮ್ಮಟೇಶ್ವರನ ವಿಗ್ರಹ ನಿರ್ಮಿಸಿ ಪ್ರತಿಷ್ಠಾಪನೆ ದಿನ ನಿಗದಿಯಾಗಿರುತ್ತದೆ. ಪ್ರತಿಷ್ಠಾಪನ ದಿನ 100 ಆನೆ, ಒಂದು ಸಾವಿರ ಆಳುಗಳಿಂದ ಗೊಮ್ಮಟೇಶ್ವರನ ವಿಗ್ರಹವನ್ನು ನಿಲ್ಲಿಸಲು ಸಾಧ್ಯವಾಗುದಿಲ್ಲ. ಆಗ ಬೈರವ ಅರಸರು ಶಿಲ್ಪಬೀರುವನ್ನು ಕರೆದು ಗೊಮ್ಮಟೇಶ್ವರನ ವಿಗ್ರಹವನ್ನು ನೆಟ್ಟಗೆ ನಿಲ್ಲಿಸಿದರೆ, ಉಂಬಳಿ, ಇಷ್ಟುದಿನ ಕೂಲಿ ಹಾಗೂ ಚಿನ್ನದ ನಾಣ್ಯಗಳನ್ನು ಬಹುಮಾನ ರೂಪದಲ್ಲಿ ಕೊಡುತ್ತೇನೆ ಎಂದು ಹೇಳಲು ಶಿಲ್ಪಬೀರುವು ತನ್ನ ಶಿಲ್ಪಶಾಸ್ತ್ರ ವಿದ್ಯೆಯಿಂದ ಎಡಕೈಯಲ್ಲಿ ಎತ್ತಿ ಗೊಮ್ಮಟೇಶ್ವರನ ವಿಗ್ರಹವನ್ನು ಪ್ರತಿಷ್ಠಾಪಿಸುತ್ತಾನೆ. ಮರುದಿನ ಅರಮನೆಗೆ ಸನ್ಮಾನಕ್ಕೆ ಬರಲು ಅರಸರು ಶಿಲ್ಪಬೀರುವಿನಲ್ಲಿ ತಿಳಿಸುತ್ತಾರೆ. ಮತ್ಸರ ಸ್ವಭಾವದ ಭೈರವ ಸೂಡವ ಅರಸರು ತನ್ನೂರಿನಲ್ಲಿ ಮಾಡಿದ ಗೊಮ್ಮಟೇಶ್ವರನ ವಿಗ್ರಹವನ್ನು ಬೇರೆಲ್ಲೂ ಮಾಡಬಾರದೆಂದು ಮನದೊಳಗೆ ತೀರ್ಮಾನಿಸಿರುತ್ತಾನೆ. ಮರುದಿನ ಬೆಳಿಗ್ಗೆ ಅರಮನೆಯಲ್ಲಿ ಶಿಲ್ಪಬೀರುವನ್ನು ಸನ್ಮಾನಿಸಿ ಬಲಕೈಗೆ ಚಿನ್ನದ ಕಡಗವನ್ನು ತೊಡಿಸಿ, ಆಳುಗಳಿಂದ ಹಿಂದಿನಿಂದ ಎಡಕೈಯನ್ನು ಕತ್ತರಿಸಿ ಬಿಡುತ್ತಾನೆ.ಮತ್ತು ಎಡಕಾಲನ್ನು ಕೂಡ ಕತ್ತರಿಸಿ ಬಿಡುತ್ತಾನೆ. ಶಿಲ್ಪಿಬೀರುವು ಒಂದು ಕಾಲು ಹಾಗೂ ಒಂದು ಕೈಯಿಂದ ಕುಂಟುತ್ತಾ ಅರಸರಿಗೆ ಶಾಪ ಇಡುತ್ತಾ ಕಾರ್ಕಳ ಊರಿನಲ್ಲಿ ನೀರು ಕೂಡಾ ಮುಟ್ಟುವುದಿಲ್ಲ ಎಂದು ತೀರ್ಮಾನಿಸಿ ವೇಣೂರು ಕಡೆ ಹೊರಟು ಬಿಡುತ್ತಾನೆ. ಆಗ ವೇಣೂರಿನಲ್ಲಿ ಆಳ್ವಿಕೆ ಮಾಡುತ್ತಿದ್ದ ತಿಮ್ಮಣಾಜಲ ಅರಸರಿಗೆ ವಿಷಯ ಗೊತ್ತಾಗಿ ಅತ್ಯಂತ ಶ್ರೇಷ್ಠ ಶಿಲ್ಪಿ ನಮ್ಮ ಊರಿಗೆ ಆಗಮಿಸಿದ್ದಾನೆ ಎಂದು ತಿಳಿದು ಕರೆದು ಸನ್ಮಾನಿಸುತ್ತಾರೆ. ವೇಣೂರಿನ ಅರಸ ತಿಮ್ಮಣಾಜಲರು ಶಿಲ್ಪಬೀರುವಿನಲ್ಲಿ ನಮ್ಮ ಊರಿನಲ್ಲಿ ಒಂದು ಗೊಮ್ಮಟೇಶ್ವರನ ವಿಗ್ರಹವನ್ನು ಕೆತ್ತಿಕೊಡಲು ಕೇಳಿಕೊಳ್ಳುತ್ತಾನೆ. ಒಂದು ಕೈ ಮತ್ತು ಒಂದು ಕಾಲು ಇಲ್ಲದೆ ಗೊಮ್ಮಟೇಶ್ವರ ವಿಗ್ರಹ ಕೆತ್ತಲು ಸಾಧ್ಯವಿಲ್ಲ ಎಂದು ಶಿಲ್ಪಬೀರುವು ತಿಳಿಸುತ್ತಾನೆ. ಅರಸರು ಅತ್ಯಂತ ಬೇಸರಪಟ್ಟದನ್ನು ಕಂಡ ಶಿಲ್ಪಬೀರು ವೇಣೂರಿನಲ್ಲಿ ಗೊಮ್ಮಟೇಶ್ವರನ ವಿಗ್ರಹವನ್ನು ನಿರ್ಮಿಸಲು ತೀರ್ಮಾನಿಸುತ್ತಾನೆ. ಒಂದು ಕೈಯಿಂದ ಬಡಿದು ಗೊಮ್ಮಟೇಶ್ವರನ ವಿಗ್ರಹವನ್ನು ನಿರ್ಮಿಸುತ್ತಾನೆ. ತಿಮ್ಮಣಾಜಲರು ಅತ್ಯಂತ ಸಂತೋಷದಿಂದ ಗೊಮ್ಮಟೇಶ್ವರನ ವಿಗ್ರಹವನ್ನು ಪ್ರತಿಷ್ಠಾಪಿಸುತ್ತಾನೆ. ಅರಸರು ಮನದೊಳಗೆ ಇನ್ನು ಮುಂದೆ ಯಾವ ರಾಜ್ಯದಲ್ಲೂ ಕೂಡ ಇಂತಹ ವಿಗ್ರಹ ನಿರ್ಮಾಣವಾಗಬಾರದು, ಇವನನ್ನು ಹೀಗೆ ಬಿಟ್ಟರೆ ಇನ್ನು ಬೇರೆ ಕಡೆಯಲ್ಲೂ ನಿರ್ಮಾಣ ಮಾಡುತ್ತಾನೆ ಎಂದು ತಿಳಿದು ಶಿಲ್ಪಬೀರುವಿನ ಒಂದು ಕೈ ಹಾಗೂ ಒಂದು ಕಾಲನ್ನು ಕಡಿದು ಬಿಡುತ್ತಾನೆ. ಶಿಲ್ಪಿಬೀರುವು ಎರಡು ಕೈಕಾಲನ್ನು ಕಳಕೊಂಡು ನಾನು ಮಾಡಿದ ಒಳ್ಳೆ ಕೆಲಸಕ್ಕೆ ನನಗೆ ಈ ಶಿಕ್ಷೆಯಾಯಿತು ಎಂದು ಆ ಅರಸು ವಂಶವೇ ನಾಶವಾಗಬೇಕು.ಈ ಇಡೀ ಊರೇ ಸ್ಮಶಾನವಾಗಬೇಕು ಎಂದು ಶಪಿಸುತ್ತಾ ಬಾಯಿಯಿಂದ ಉಳಿಯನ್ನು ಹಿಡಿದು ಗೊಮ್ಮಟೇಶ್ವರನ ಸಮೀಪ ಒಂದು ಗುರುತನ್ನು ಹಾಕಿ ಕುಲದೇವರನ್ನು ಉಗ್ರ ಸ್ವರೂಪದಲ್ಲಿ ಪ್ರಾರ್ಥಿಸಿ ಸ್ವಯಂ ಮಾಯ ಸ್ವರೂಪವನ್ನು ತಾಳುತ್ತಾನೆ.
ಇತ್ತ ತಂಗಿ ಕಾಳಮ್ಮ ಕಾರ್ಕಳಕ್ಕೆ ಬರಲು ಭೈರವ ಸೂಡವ ಅರಸು ಅಣ್ಣನ ಕೈ ಹಾಗೂ ಕಾಲನ್ನು ಕಡಿದು ಹಾಕಿರುವ ವಿಚಾರ ತಿಳಿಯುತ್ತದೆ.ವೇಣೂರಿಗೆ ಹೋಗಿರುವ ವಿಚಾರ ತಿಳಿದು ಅಣ್ಣನನ್ನು ನೋಡಲು ದುಃಖಿಸುತ್ತಾ ಹೊರಡುತ್ತಾಳೆ. ವೇಣೂರಿಗೆ ಬಂದು ತಲುಪಿದ ಕೂಡಲೇ ವೇಣೂರಿನ ಅರಸರು ಕೂಡ ಗೊಮ್ಮಟೇಶ್ವರನ ವಿಗ್ರಹವನ್ನು ಕೆತ್ತಿಸಿ ಕೈಕಾಲುನ್ನು ಕಡಿದು ಹಾಕಿದ ವಿಷಯ ತಿಳಿದು ಅಣ್ಣ ಪ್ರಾಣ ಬಿಟ್ಟ ಸ್ಥಳಕ್ಕೆ ಬರುತ್ತಾಳೆ.ಅಣ್ಣ ಬಾಯಿಯಲ್ಲಿ ಕೆತ್ತಿದ ಗುರುತ್ತನ್ನು ನೋಡಿ ಉಗ್ರ ಸ್ವರೂಪವನ್ನು ತಾಳಿ ಕೂದಲನ್ನು ಬಿಟ್ಟು ಅಣ್ಣನಿಗೆ ಮೋಸ ಮಾಡಿದವರನ್ನು ಶಪಿಸುತ್ತಾ ತನ್ನ ತಲೆಯನ್ನು ಅದೇ ಗುರುತಿಗೆ ಹೊಡೆದುಕೊಂಡು ಪ್ರಾಣ ಬಿಟ್ಟು ಮಾಯ ಸ್ವರೂಪವನ್ನು ತಾಳಿ ದೈವ ಸ್ವರೂಪವನ್ನು ತಾಳುತ್ತಾಳೆ.

ಅಣ್ಣ ಕಲ್ಕುಡ ಮತ್ತು ತಂಗಿ ಕಲ್ಲುರ್ಟಿ ದೈವಸ್ವರೂಪವನ್ನು ತಾಳಿ ಉಗ್ರರೂಪದಲ್ಲಿ ಕಾರ್ಕಳ ಪೇಟೆಯನ್ನು ಸೇರುತ್ತಾಳೆ. ತಂಗಿ ಕಲ್ಲುರ್ಟಿ ಕೋಪದಲ್ಲಿ ಗುಡುಗುತ್ತಾ ಒಂದು ಕೈಯಲ್ಲಿ ದೊಂದಿಯನ್ನು ಹಿಡಿದು ಕಾರ್ಕಳ ಪೇಟೆಯನ್ನು ಅರಸರ ಅರಮನೆಯನ್ನು ಸುಟ್ಟು ಹಾಕುತ್ತಾಳೆ.ಕಲ್ಕುಡ ಇಡೀ ಕಾರ್ಕಳ ಪೇಟೆಗೆ ಕಲ್ಲಿನ ಮಳೆ ಸುರಿಸಿತ್ತಾನೆ. ಅರಸನ ತಾಯಿಯನ್ನು ಏಳು ರಾತ್ರಿ ಏಳು ಹಗಲು ನೀರಿನಲ್ಲಿ ಮುಳುಗಿಸಿ ಇಡುತ್ತಾರೆ.ಕಾರ್ಕಳದ ಐದು ಸಾವಿರ ಮಂದಿಗೆ ಹುಚ್ಚು ಹಿಡಿಸುತ್ತಾರೆ.ಕಲ್ಕುಡ ಕಲ್ಲುರ್ಟಿಯ ಉಪಟಳದಿಂದ ಕಂಗಾಲಾದ ಬೈರವ ಸೂಡ ಅರಸರು ಸಿಕ್ಕ ಸಿಕ್ಕ ಜ್ಯೋತಿಷಿ ಮಂತ್ರವಾದಿಗಳಲ್ಲಿ ಮೊರೆ ಹೋಗಿ ಕಲ್ಕುಡ ಕಲ್ಲುರ್ಟಿಯ ನಿರ್ನಾಮಕ್ಕೆ ಪ್ರಯತ್ನಿಸುತ್ತಾನೆ. ಬಂದತಹ ಮಂತ್ರವಾದಿಗಳು ಉಂಡ ಅನ್ನ ವಿಷವಾಗಿ ಸಾವನ್ನಪ್ಪುತ್ತಾರೆ. ಅರಸರಿಗೆ ತಾನು ಮಾಡಿದ ತಪ್ಪಿನ ಅರಿವಾಗಿ ಕಲ್ಕುಡ ಹಾಗೂ ಕಲ್ಕುರ್ಟಿಯನ್ನು ಪೂಜಿಸಿ ಪ್ರಾಣ ಬಿಡುತ್ತಾನೆ.
ನಂತರದಲ್ಲಿ ಇಡೀ ತುಳುನಾಡಿನಲ್ಲಿ ಕಲ್ಕುಡ ಹಾಗೂ ಕಲ್ಕುರ್ಟಿಯನ್ನು ಆರಾಧಿಸಿಕೊಂಡು ಬರಲು ಪ್ರಾರಂಭಿಸುತ್ತಾರೆ. ಕಾರ್ಕಳ ಪೇಟೆಯನ್ನು ಸುಟ್ಟದ್ದರಿಂದ “ಸುಡುಕತ್ತರಿಯಾಗಿ” ಅನ್ನವನ್ನು ವಿಷ ಮಾಡಿದ್ದರಿಂದ “ ಪಾಶನಮೂರ್ತಿ” ಯಾಗಿ ಹಾಗೂ ಮರ್ತಾಳಿ, ವರ್ತಿ, ಜೋಡುಭೂತ ಎಂದು ಬೇರೆ ಬೇರೆ ಹೆಸರುಗಳಿಂದ ತುಳುನಾಡಿನ ಜನ ಆರಾಧನೆ ಮಾಡಿಕೊಂಡು ಬರುತ್ತಾರೆ.
