ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರ

ನಮ್ಮ ದೇಶದಲ್ಲಿ ಸಾಕಷ್ಟು ಗಣೇಶನ ದೇವಾಲಯಗಳಿವೆ. ಆ ದೇವಾಲಯಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡದಿಂದ ಮೂರು ಕಿಲೋ ಮೀಟರ್ ದೂರದಲ್ಲಿರುವ ಸೌತಡ್ಕದ ಗಣೇಶನ ದೇವಾಲಯಕ್ಕೆ ಗರ್ಭಗುಡಿಯೇ ಇಲ್ಲ. ಇದು ಬಹಳ ಪ್ರಭಾವಶಾಲಿ ಹಾಗೂ ಮಹಿಮಾನ್ವಿತ ದೇವಾಲಯವಾಗಿದೆ. ಇದೊಂದು ಪವಿತ್ರ ಧಾರ್ಮಿಕ ಸ್ಥಳದ ಜೊತೆಗೆ ಪ್ರವಾಸಿತಾಣವೂ ಆಗಿದೆ.

ಸುಮಾರು 800 ವರ್ಷಗಳ ಹಿಂದೆ ಈ ಪ್ರದೇಶದ ಸಮೀಪದಲ್ಲಿ ರಾಜವಂಶಕ್ಕೊಳಪಟ್ಟ ದೇವಾಲಯವು ಸಂಗ್ರಾಮವೊಂದರಲ್ಲಿ ಅರೆಸೊತ್ತಿಗೆ ನಾಶವಾಗಿ ದೇವಾಲಯ ಧ್ವಂಸವಾಗಿತ್ತು. ಈ ದೇವಾಲಯದಲ್ಲಿ ಪೂಜಿಸಲಾಗುತ್ತಿದ್ದ ಈ ಗಣಪತಿ ವಿಗ್ರಹವು ದನಗಳನ್ನು ಕಾಯುತ್ತಿದ್ದ ಗೋಪಾಲ ಬಾಲಕರಿಗೆ ಗೋಚರವಾಯ್ತು. ಈ ಬಾಲಕರೆಲ್ಲರೂ ಸೇರಿಕೊಂಡು ಗಣಪತಿ ವಿಗ್ರಹವನ್ನು ಎತ್ತಿಕೊಂಡು ದಾರಿಯುದ್ದಕ್ಕೂ ಭಜನೆ ಪೂಜೆಗಳನ್ನು ಮಾಡುತ್ತಾ ಈಗ ಇರುವ ಮರದ ಬುಡದಲ್ಲಿ ಕಾಟುಕಲ್ಲುಗಳ ಕಟ್ಟೆ ಇಟ್ಟು ತಾವು ಬೆಳೆಯುತ್ತಿರುವ ಸೌತೆ ಮಿಡಿಗಳನ್ನು ಪ್ರತಿ ದಿನ ನೈವೇದ್ಯವನ್ನಾಗಿ ಅರ್ಪಿಸಿ ಭಜನೆ ಪ್ಪೂಜೆಗಳನ್ನು ಮಾಡತೊಡಗಿದರು. ಅಂದಿನಿಂದ ಈ ಕ್ಷೇತ್ರಕ್ಕೆ ಸೌತಡ್ಕ ಎಂದು ಹೆಸರು ಬಂತು. (ಸೌತೆ + ಅಡ್ಕ : ಅಡ್ಕ ಎಂದರೆ ಬಯಲು ಎಂದರ್ಥ)

ದೇವಾಸ್ಥಾನಗಳು ವಾಸ್ತು ಶಿಲ್ಪಕ್ಕನುಗುಣವಾಗಿ ಗೋಪುರ ಗರ್ಭ ಗುಡಿಗಳನ್ನು ರಚಿಸಿ ಪೂರ್ವಾಭಿಮುಖವಾಗಿ ದೇವರ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡುವ ಪೂರ್ವ ಸಂಪ್ರದಾಯ ನಿಯಮವಿದ್ದು, ಸೌತಡ್ಕ ಗಣಪನು ಈ ಎಲ್ಲಾ ಸಂಪ್ರಾದಯಗಳನ್ನು ತಿರಸ್ಕರಿಸಿ, ಪ್ರಕೃತಿಯ ಸಂದರ ತಾಣದಲ್ಲಿ ಅಗ್ನೇಯ ಮುಖವಾಗಿ, ಬಯಲೇ ಆಲಯಾವಾಗಿರಿಸಿಕೊಂಡು ಬಡವ ಶ್ರೀಮಂತರೆಂಬ ತಾರತಮ್ಯವಿಲ್ಲದೆ, ಜಾತಿ, ಮತ ಭೇದವೆಣಿಸದೆ ಮಾನವರಿಗೂ, ಸಕಲ ಜೀವ ರಾಶಿಗಳಿಗೂ ಅಭಯ ಹಸ್ತನಾಗಿ ಹಗಲು ರಾತ್ರಿ ಅನುಗ್ರಹಿಸುತ್ತಾ ರಕ್ಷಿಸಿಕೊಂಡು ಬರುತ್ತಿರುವುದು ಸೌತಡ್ಕ ಮಹತ್ವ ಮೂಡಿಸುವ ವಿಶಿಷ್ಟ ಸಂಪ್ರದಾಯವಾಗಿರುತ್ತದೆ. ಹಿಂದೆ ಈ ಪರಿಸರದ ಶ್ರೀಮಂತ ಬ್ರಾಹ್ಮಣ ಭಕ್ತರೊಬ್ಬರು ಗಣೇಶನಿಗೆ ದೇವಸ್ಥಾನ ನಿರ್ಮಿಸಲು ತೀರ್ಮಾನಿಸಿ ಕೆಲಸ ಪ್ರಾರಂಭ ಮಾಡುವಷ್ಟರಲ್ಲಿ ಗಣಪತಿಯು ದನ ಕಾಯುವ ಹುಡುಗನ ರೂಪದಲ್ಲಿ ಆ ಬ್ರಾಹ್ಮಣನಿಗೆ ಕನಸಿನಲ್ಲಿ ಕಾಣಿಸಿಕೊಂಡು ದೇಗುಲ ನಿರ್ಮಿಸುವುದಾದರೆ ಅದರ ಗೋಪುರವು ರಾತ್ರಿ ಬೆಳಗಾಗುವುದರೊಳಗೆ ತಂದೆಯಾದ ಕಾಶಿ ವಿಶ್ವನಾಥನಿಗೆ ಕಾಣುವಷ್ಟು ಎತ್ತರದಲ್ಲಿರಬೇಕೆಂದು ಕಟ್ಟಾಜ್ಞೆ ನೀಡಿರುವುದರಿಂದ ಆ ಬ್ರಾಹ್ಮಣನಿಗೆ ಆ ಸವಾಲನ್ನು ಎದುರಿಸಲು ತೀರ ಅಸಾಧ್ಯವೆಂದು ಮನಗಂಡು ದೇಗುಲ ನಿರ್ಮಾಣದ ಯೋಜನೆಯನ್ನು ಕೈ ಬಿಡಲಾಯಿತು. ಕೆಲವು ಸಮಯಗಳ ಹಿಂದೆ ಭಕ್ತಾದಿಗಳೆಲ್ಲರೂ ಸೇರಿ ಜ್ಯೋತಿಷ್ಯರನ್ನು ಕರೆಸಿ ಅಷ್ಟಮಂಗಲ ಪ್ರಶ್ನೆಯಲ್ಲಿ ಗುಡಿಕಟ್ಟುವ ಬಗ್ಗೆ ವಿಮರ್ಶಿಸಿದಾಗ, ಗುಡಿ ಗೋಪುರ ಕಟ್ಟುವುದು ದೇವರಿಗೆ ಮನಸಿಲ್ಲವೆಂದು ಯಾವುದೇ ರೀತಿಯ ಬಂಧನಕ್ಕೆ ಅವಕಾಶ ನೀಡದೇ ಸಕಲ ಜೀವರಾಶಿಗಳಿಗೂ ಸ್ವ-ಇಚ್ಛೆಯಂತೆ ಮುಕ್ತ ಪ್ರವೇಶಕ್ಕೆ ಅವಕಾಶ ಕಾದಿರಿಸಿಕೊಂಡು ಬರತಕ್ಕದೆಂದು ತಿಳಿದು ಬಂದಿರುವುದರಿಂದ ಗುಡಿಕಟ್ಟುವ ಆಲೋಚನೆಯನ್ನು ಅಲ್ಲಿಗೆ ಕೈ ಬಿಡಲಾಯಿತು.

ಅಪಟಲ ಪ್ರೇಮ ಪಟಲಮ್ (ಮನೆಯೊಲ್ಲದವನ ಪ್ರೀತಿಯ ನೆಲೆ) ಎಂದು ಕವಿಗಳು ವರ್ಣಿಸಿರುವಂತೆ, ಗಣೇಶನು ಯಾವುದೇ ಆಡಂಬರಗಳನ್ನು ಸ್ವೀಕರಿಸುವುದಿಲ್ಲ, ಪ್ರಕೃತಿಯ ಮಡಿಲಲ್ಲಿ ಬೆಳೆದು ನಿಂತಿರುವ ಗಿಡ ಮರಗಳ ನೆರಳೇ ಆಸರೆ, ತಂಪಾದ ವನ ಸಿರಿಯ ಮಧ್ಯೆ ಚಿಲಿಪಿಲಿಗುಟ್ಟುವ ಪಕ್ಷಿಗಳ ಹಾಡು, ಗಾನ ಕೋಗಿಲೆಯ ನಾದ ಸ್ವರ, ಹಚ್ಚ ಹಸುರಿನ ಎಲೆಗಳ ಮೇಲೆ ಸೂರ್ಯ ಕಿರಣಕ್ಕೆ ಚಿನ್ನದ ಮೊಗ್ಗೆಯಂತೆ ಮಿನುಗುವ ಇಬ್ಬನಿಯ ತುಣುಕುಗಳು, ಸುತ್ತಲಿನ ಬಯಲಿನಲ್ಲಿ ಸಂತಸದಿ ಕುಣಿದಾಡುತ್ತಿರುವ ಗೋವುಗಳು, ಹೀಗೆ ಹತ್ತು ಹಲವು ಪ್ರಕೃತಿ ಸೌಂದರ್ಯ ರಾಶಿಗಳ ಮಧ್ಯೆ ಗೋಪಾಲ ಬಾಲಕರು ನೈವೇಧ್ಯವಾಗಿ ತಂದೊಪ್ಪಿಸುವ ಸೌತೆ ಮಿಡಿಗಳನ್ನು ಸ್ವೀಕರಿಸುತ್ತಾ ಸಂತಸದಿಂದ ನೆಲೆಯಾಗಿರುವ ಗಣೇಶನು ಸೌತಡ್ಕ ಪುಣ್ಯ ಕ್ಷೇತ್ರದಲ್ಲಿ ಹೊರತು ಬೇರೆಲ್ಲಿಯೂ ಕಾಣಸಿಗಲಾರದು.
ಗಂಟೆಯ ಹರಕೆ : ಹರಕೆ ಹೊತ್ತು ಈ ಸ್ಥಳಕ್ಕೆ ಬಂದು ಗಣಪನಲ್ಲಿ ಪ್ರಾರ್ಥಿಸಿದರೆ 2 ತಿಂಗಳೊಳಗಾಗಿ ಅವರ ಬೇಡಿಕೆ ಈಡೇರುತ್ತದಂತೆ. ಹಾಗಾಗಿ ಇಲ್ಲಿ ಸಾವಿರಾರು ಗಂಟೆಗಳನ್ನು ಕಾಣಬಹುದು.
ಸೌತಡ್ಕ ಮಹಾಗಣಪತಿ ದೇವರನ್ನು ದರ್ಶನ ಮಾಡಿದರೆ ವಿದ್ಯೆ ,ಬುದ್ಧಿ ಪ್ರಾಪ್ತಿಯಾಗುತ್ತದೆ. ಹಣದ ಸಮಸ್ಯೆ ಇದ್ದರೆ ಅದೂ ದೂರವಾಗುತ್ತಂತೆ. ದಂಪತಿಗಳಿಗೆ ಸಂತಾನ ಭಾಗ್ಯ ದೊರೆಯುತ್ತದೆ ಎನ್ನಲಾಗುತ್ತದೆ. ಮಕ್ಕಳನ್ನು ಅನ್ನಪ್ರಾಶನಕ್ಕೂ ಇಲ್ಲಿಗೆ ಕರೆತರುತ್ತಾರೆ.

