
ನಮಸ್ತೇ ಶಾರದಾ ದೇವಿ ಕಾಶ್ಮೀರ ಪುರವಾಸಿನಿ ತ್ವಾಮಹಂ ಪ್ರಾರ್ಥಯೇ ನಿತ್ಯಂ ವಿದ್ಯಾದಾನಂ ಚ ದೇಹಿ ಮೇ
ಶಾರದಾದೇವಿ, ವಾಗ್ದೇವತೆ, ವಿದ್ಯಾದೇವತೆ, ಜ್ಞಾನದೇವತೆ, ತ್ರಿಲೋಕ ಸುಂದರಿ, ವೀಣಾಪಾಣಿ ಹೀಗೆ… ಹಲವಾರು ಸ್ವರೂಪಗಳಲ್ಲಿ ಪರಿಚಿತಳು. ಶಾರದಾದೇವಿ ಹಿಂದೂ ಧರ್ಮದಲ್ಲಿ ಜ್ಞಾನ ಮತ್ತು ಕಲೆಗಳ ಬಂಡಾರದ ಅಧಿದೇವತೆ, ಬ್ರಹ್ಮನ ರಾಣಿ ಹಾಗೂ ಶ್ವೇತಾ ವಸ್ತ್ರದಾರಿಯೆಂದು ಪ್ರಸಿದ್ಧಿಯಾಗಿ ನಾವೆಲ್ಲರೂ ಶ್ರೀ ಶಾರದೆಯನ್ನು ಆರಾಧಿಸಿಕೊಂಡು ಬರುತ್ತಿದ್ದೇವೆ.
ಶಾರದಾಂಬೆಗೆ ಪ್ರಸಿದ್ಧಿ ಪಡೆದ ಒಂದು ದೇವಾಲಯ ಅಥವಾ ಕ್ಷೇತ್ರವೆಂದರೆ ಅದು ಶೃಂಗೇರಿ. ಶೃಂಗೇರಿ ಶಾರದಾ ಪೀಠ ಇದು 1200 ವರ್ಷಗಳಷ್ಟು ಹಳೆಯದಾದ ದೇವಾಲಯವನ್ನು ಹೊಂದಿದೆ. ಆದಿ ಶಂಕರಾಚಾರ್ಯರು ತಮ್ಮ ಶಿಷ್ಯರಿಗೆ ಉಳಿದುಕೊಳ್ಳಲು ಮತ್ತು ಕಲಿಸಲು ಸ್ಥಳವನ್ನು ಆರಿಸಿಕೊಂಡರು. ಅವರು ಹನ್ನೆರಡು ವರ್ಷಗಳ ಕಾಲ ಇಲ್ಲಿಯೇ ಇದ್ದರು ಎಂದು ನಂಬಲಾಗಿದೆ. ನಂತರ ಅವರು ಉತ್ತರ ಭಾರತ, ಪೂರ್ವ ಭಾರತ ಮತ್ತು ಪಶ್ಚಿಮ ಭಾರತದಲ್ಲಿ ಮಠಗಳನ್ನು ಸ್ಥಾಪಿಸಿದರು. ಆದಿ ಶಂಕರಾಚಾರ್ಯರು ನಾಲ್ಕು ದಿಕ್ಕುಗಳಲ್ಲಿ ನಾಲ್ಕು ದೇವಾಲಯಗಳನ್ನು ನಿರ್ಮಿಸಿದ್ದಾರೆ. ಇವುಗಳಲ್ಲಿ ಪಶ್ಚಿಮದಲ್ಲಿ ಕೆರೆ ಆಂಜನೇಯ ದೇವಸ್ಥಾನ, ಪೂರ್ವದಲ್ಲಿ ಕಾಲಭೈರವ ದೇವಸ್ಥಾನ, ದಕ್ಷಿಣದ ದುರ್ಗಾಂಬ ದೇವಸ್ಥಾನ ಮತ್ತು ಉತ್ತರದ ಕಾಳಿಕಾಂಬ ದೇವಸ್ಥಾನ ಸೇರಿವೆ.
ಶಕ್ತಿಪೀಠವಾದ ಬಗ್ಗೆ ರೋಚಕ ಕಥೆ : ದಕ್ಷನಿಂದ ಅವಮಾನಕ್ಕೊಳಗಾದ ಸತೀದೇವಿಯು ಯೋಗಾಗ್ನಿಯಲ್ಲಿ ಆತ್ಮಾರ್ಪಣೆ ಮಾಡಿಕೊಳ್ಳುತ್ತಾಳೆ. ಶಿವನು ಕೋಪೋದ್ರಿಕ್ತನಾಗಿ, ಆವೇಶದಿಂದ ತನ್ನ ಜಟಾಮುಡಿಯನ್ನು ಬಿಡಿಸಿಕೊಂಡು ಸತೀದೇವಿಯ ಮೃತ ದೇಹವನ್ನು ಭುಜದ ಮೇಲೆ ಹೊತ್ತುಕೊಂಡು ಉಗ್ರಸ್ವರೂಪವಾಗುತ್ತಾ, ಲೋಕಗಳನ್ನೆಲ್ಲಾ ತಿರುಗುತ್ತಿದ್ದನು. 
ದೇವತೆಗಳ ಕೋರಿಕೆಗೆ ಮಣಿದ ವಿಷ್ಣುವು ಶಿವನನ್ನು ಹಿಂಬಾಲಿಸುತ್ತಾ ಸತೀದೇವಿಯ ಮೃತದೇಹವನ್ನು ತನ್ನ ಸುದರ್ಶನ ಚಕ್ರದಿಂದ ತುಂಡುಗಳನ್ನಾಗಿ ಮಾಡಲು ಪ್ರಾರಂಭಿಸಿದನು. ಇದರಿಂದ ಸತೀದೇವಿಯ ಶರೀರದ ಭಾಗಗಳೂ, ಅವಳ ಅಭರಣಗಳೂ ಭೂಲೋಕದಲ್ಲಿ ಬೀಳತೊಡಗಿದವು. ಹೀಗೆ ಸತೀ ದೇವಿಯ ಶರೀರದ ಭಾಗ, ಆಭರಣಗಳು ಕೆಳಗೆ ಬಿದ್ದ ಸ್ಥಳಗಳು “ಶಕ್ತಿಪೀಠ” ಗಳೆಂದು ಹೆಸರುವಾಸಿಯಾಗಿವೆ. ಸತೀದೇವಿಯ ನಾಲಿಗೆಯ ಭಾಗ ಬಿದ್ದ ಸ್ಥಳ ಮುಂದೆ ಶೃಂಗೇರಿ ಕ್ಷೇತ್ರವಾಯಿತು. 
ಶೃಂಗೇರಿಯಲ್ಲಿ ಐತಿಹಾಸಿಕ ಪ್ರಾಮುಖ್ಯತೆ ಹೊಂದಿರುವ ದೇವಾಲಯಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಶ್ರೀ ಶಾರದಾಂಬ ದೇವಸ್ಥಾನ, ಶ್ರೀ ವಿದ್ಯಾಶಂಕರ ದೇವಸ್ಥಾನ ಮತ್ತು ಪಾರ್ಶ್ವನಾಥ ಜೈನ ದೇವಾಲಯ ಬಹಳ ಮುಖ್ಯ. ದೇವಾಲಯದ ಪ್ರವೇಶದ್ವಾರದಲ್ಲಿ ದ್ರಾವಿಡ, ವಾಯನಗರ ಮತ್ತು ಹೊಯ್ಸಳ ಶೈಲಿಯ ವಾಸ್ತುಶಿಲ್ಪದ ಮಿಶ್ರಣವನ್ನು ಹೊಂದಿರುವ ಸುಂದರವಾದ ವಿದ್ಯಾಶಂಕರ ದೇವಾಲಯವನ್ನು ನೋಡಬಹುದು. ಅನೇಕ ದೇವಾಲಯಗಳು ಮತ್ತು ಮಠಗಳಿಂದಾಗಿ ಶೃಂಗೇರಿ ಕಲಿಕಾ ಕೇಂದ್ರವೆಂದು ಪ್ರಸಿದ್ಧವಾಗಿದೆ. ವೈದಿಕ ತತ್ವಶಾಸ್ತ್ರವನ್ನು ಕಲಿಯಲು ಅನೇಕ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಾರೆ. ವಸತಿಗಾಗಿ ವಿವಿಧ ಆಯ್ಕೆಗಳು ಶೃಂಗೇರಿಯಲ್ಲಿ ಲಭ್ಯವಿದೆ.
ಅಕ್ಷರಾಭ್ಯಾಸ :
ಇದು ವಿದ್ಯಾಧಿದೇವತೆಯಾದ ಸರಸ್ವತಿ ದೇವಿಯ ದೇವಸ್ಥಾನವಾಗಿರುವುದರಿಂದ, ಅಕ್ಷರಾಭ್ಯಾಸಕ್ಕೆ ಹೆಸರುವಾಸಿಯಾಗಿದೆ. 2ರಿಂದ 5 ವರ್ಷದೊಳಗಿನ ಮಕ್ಕಳನ್ನು ಇಲ್ಲಿ ಕರೆದುಕೊಂಡು ಬಂದು ಓಂ ನಾಮ ಬರೆಸಿ ವಿದ್ಯಾಭ್ಯಾಸ ಆರಂಭಿಸಿದರೆ ವಿದ್ಯೆ ಚೆನ್ನಾಗಿ ನಡೆಯುತ್ತದೆ ಎಂಬ ನಂಬಿಕೆಯಿಂದ ಪೋಷಕರು ದೊಡ್ಡ ಸಂಖ್ಯೆಯಲ್ಲಿ ಇಲ್ಲಿ ಅಕ್ಷರಾಭ್ಯಾಸಕ್ಕೆ ಮಕ್ಕಳನ್ನು ಕರೆದುಕೊಂಡು ಬರುತ್ತಾರೆ.







